"ಮ್ಯಾನಿಫೆಸ್ಟೇಷನ್ – ವಿವೇಕಾನಂದರು ಶತಮಾನಗಳ ಹಿಂದೆ ಹೇಳಿದ ಸತ್ಯ" "ರಾಷ್ಟ್ರ ಜಾಗೃತಿ & ವ್ಯಕ್ತಿತ್ವ ನಿರ್ಮಾಣ – ಬದುಕಿಗೆ ದಿಕ್ಕು ತೋರಿದ ಪುಸ್ತಕಗಳು"
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ:ನಾಗಲಕ್ಷ್ಮಿ ಕೆ.ಎನ್. ದಿ: ೧೧.೦೮.೨೦೨೫
ಆಗ ಹೈಸ್ಕೂಲು
ಮುಗಿಯುವ ವರ್ಷದ ಕೊನೆಯಲ್ಲಿದ್ದ ನನಗೆ, ಇಂಗ್ಲೀಷ್ ಭಾಷಾ ಪುದ್ತಕದಲ್ಲಿದ್ದ ಎರಡನೇ ಅಧ್ಯಾಯ “ ಸ್ವಾಮಿ ವಿವೇಕಾನಂದ”
ರ ಜೀವನದ ಕುರಿತು ಇದ್ದ ಎರಡೇ ಪೇಜುಗಳ ಪಾಠವು ನನ್ನನ್ನು ಅಗಾಧವಾಗಿ ಸೆಳೆಯಿತು ಮತ್ತು ಅಲ್ಲಿಯವರೆಗೂ
ನಾನು ಕೇಳಿದ್ದ ಸ್ವಾಮಿ ವಿವೇಕಾನಂದ ರ ಹೆಸರು, ಆ ಪಾಠದ ಕಲಿಕೆಯ ನಂತರ ವಿವೇಕಾನಂದರ ಹೆಸರು ನನಗೆ
ತುಂಬಾ ವಿಶೇಷ ಎನಿಸತೊಡಗಿತ್ತು. ಹದಿಹರೆಯಲ್ಲಿದ್ದ ನನಗೆ ಹೊಸತನ್ನು ಕಲಿಯುವ, ಕಲಿತದ್ದನ್ನು ಅಳವಡಿಸಿಕೊಳ್ಳುವ
ಹುಚ್ಚು ಸ್ವಲ್ಪ ಹೆಚ್ಚಾಗಿಯೇ ಇತ್ತು. ಇದರ ಪರಿಣಾಮವಾಗಿಯೇ ಅಂದು ಪ್ರಾರಂಭಿಸಿದ ನನ್ನ ಧ್ಯಾನ ಮಾಡುವ
ಹುಚ್ಚು ಇಂದಿಗೂ ನನ್ನ ಬದುಕಿನ ಅವಿಭಾಜ್ಯ ಕ್ರಿಯೆಯಾಗಿದೆ.
ಅಂದಿನ ನನ್ನ ಚಂಚಲತೆಯ
ಹಾರ್ಮೋನುಗಳನ್ನು ನಿಯಂತ್ರಿಸಲ್ಪಡಲು ನಾನು ಪ್ರಾರಂಭಿಸಿದ ಧ್ಯಾನಾಭ್ಯಾಸವು ನನಗೆ ತುಂಬಾನೆ ಫಲಕೊಟ್ಟಿತು.
ಹಾಗೆಯೇ ಶಾಲೆಯಲ್ಲಿಯೇ ಅತಿಹೆಚ್ಚು ಮಾರ್ಕ್ಸ ಗಳೊಂದಿಗೆ ಪಾಸಾಗಲು ಸಹಾಯಕವಾಯಿತು
ಎಂದರೂ ತಪ್ಪಿಲ್ಲ.
ಹೀಗೆ ಆರಂಭವಾದ
ವಿವೇಕಾನಂದರ ಜೀವನದ ಬಗ್ಗೆ ತಿಳಿಯುವ ಆಸಕ್ತಿಯು ಹೆಚ್ಚಾಯಿತು. ಅದೇ ಸಮಯದಲ್ಲಿ ನನಗೆ ಮೈಸೂರಿನ ಶ್ರೀ
ರಾಮಕೃಷ್ಣಾಶ್ರಮ ಪ್ರಕಟಿತ ಸ್ವಾಮಿ ವಿವೇಕಾನಂದರ , “ರಾಷ್ಟ್ರ ಜಾಗೃತಿ” , ಮತ್ತು “ವ್ಯಕ್ತಿತ್ವದ
ನಿರ್ಮಾಣ” ಈ ಎರಡೂ ಪುಸ್ತಕಗಳು ನನ್ನ ಬದುಕಿನಲ್ಲಿ , ನನ್ನ ವ್ಯಕ್ತಿತ್ವ ವಿಕಸನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿವೆ ಮತ್ತು ಇಂದಿಗೂ ನನ್ನ ದಿನಚರಿಯ
ಭಾಗವಾಗಿವೆ.
ಇಂದಿಗೂ ಸಹ ಯಾವಾಗಲಾದರೂ
ಮನಸ್ಸಿಗೆ ಬೇಸರವೆನಿಸಿದರೆ, ನಿರೀಕ್ಷೆಗಳು ಫಲಿಸದೇ ಜಿಜ್ಞಾಸೆ ಮೂಡಿದಾಗ, ಇದೇ ಪುಸ್ತಕಗಳನ್ನು ಮತ್ತೆ
ಮತ್ತೆ ಓದುತ್ತೇನೆ, ಎಷ್ಟು ಬಾರಿ ಓದಿದರೂ ಸಾಕೆನೆಸುವುದಿಲ್ಲ. ಪ್ರತಿ ಬಾರಿ ಓದಿದಾಗಲೂ ಹೊಸ ಹೊಸ ವಿಚಾರಗಳು ನನ್ನ ಮಸ್ತಿಷ್ಕದಲ್ಲಿ ಬಲ್ಬ್ ನ ರೀತಿ
ಹೊಳೆಯುತ್ತವೆ.
ಈಗ ನಾನು ʼರಾಷ್ಟ್ರ
ಜಾಗೃತಿʼ ಪುಸ್ತಕದಲ್ಲಿ ನನ್ನ ಮನಸ್ಸು ಸೆಳೆದ ಮತ್ತು ಬದುಕಿನಲ್ಲಿ ಅಳವಡಿಸಿಕೊಂಡ ಒಂದಷ್ಟು ವಿಚಾರಗಳನ್ನು
ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.
ಸ್ವಾಮಿ ವಿವೇಕಾನಂದರ
ಬಾಲ್ಯದ ಹೆಸರು ನರೇಂದ್ರನಾಥ ಎಂದು. ಈ ಹೆಸರು ನನಗೆ ತುಂಬಾ ಅಚ್ಚುಮೆಚ್ಚು.
೧೮೮೧ ರ ಸುಮಾರಿನಲ್ಲಿ ನರೇಂದ್ರನಾಥರು ತಮ್ಮ ಗುರುಗಳಾದ ರಾಮಕೃಷ್ಣ
ಪರಮಹಂಸರನ್ನು ಬೇಟಿ ಮಾಡಿದರು. ಬೇಟಿಯ ನಂತರದಲ್ಲಿ ಇಬ್ಬರು ಒಬ್ಬರಿಗೊಬ್ಬರನ್ನು ಪರೀಕ್ಷಿಸಿಕೊಳ್ಳುತ್ತಿದ್ದರು.
೧೮೮೪ ರಲ್ಲಿ ನರೇಂದ್ರನಾಥರು
ಅವರ ತಂದೆಯವರ ವಿಯೋಗವನ್ನು ಎದುರಿಸಿದರು. ಇದೇ ಸಮಯದಲ್ಲಿ ಅವರ ಕುಟುಂಬವು ಬಹಳ ಕಷ್ಟಗಳಿಗೆ ಒಳಗಾಯಿತು, ಅವರಿಗೆ ಆ ಸಮಯದಲ್ಲಿ
ಬಹಳವೇ ಹಣದ ಸಮಸ್ಯೆಯಿತ್ತು. ಈ ಸಮಯದಲ್ಲಿ ನರೇಂದ್ರನಾಥರು ಗುರುಗಳ ಸೂಚನೆಯ ಪ್ರಕಾರ ತನ್ನ ಕುಂದು-ಕೊರತೆಗಳನ್ನು
ನೀಗಿಸಿಕೊಳ್ಳಲು, ದಕ್ಷಿಣೇಶ್ವರ ಮಹಾಮಾತೆಯಾದ ಕಾಳಿಯನ್ನು ಪ್ರಾರ್ಥಿಸಲು ಮುಂದಾದರು. ಎಷ್ಟೇ ಹಣದ ಅಗತ್ಯವಿದ್ದರೂ , ನರೇಂದ್ರನಾಥರಿಗೆ ಜ್ಞಾನ ಮತ್ತು ಭಕ್ತಿಗಾಗಿ ಮಾತ್ರವೇ ಪ್ರಾರ್ಥಿಸಲು ಸಾಧ್ಯವಾಯಿತು.
ಈ ರೀತಿಯ ಎಷ್ಟೋ
ಪರೀಕ್ಷೆಗಳ ನಂತರದಲ್ಲಿ ನರೇಂದ್ರನಾಥರು, ತಮ್ಮ ಗುರುಗಳಾದ ಶ್ರೀ ರಾಮಕೃಷ್ಣರಿಗೆ ಶರಣಾಗತರಾದರು ಎಂದು
ತಿಳಿದುಬರುತ್ತದೆ. ಇಲ್ಲಿ ತಮ್ಮ ಗುರುಗಳನ್ನು ಕಣ್ಮುಚ್ಚಿ
ನಂಬದೇ ಸ್ವತಃ ಪರೀಕ್ಷಿಸಿ ಮನಗಂಡು ನಿರ್ಧರಿಸುವ ನರೇಂದ್ರರ ಹೋರಾಟದ ಮನೋಭಾವವು ಇಂದಿಗೂ
ನನ್ನನ್ನು ಎಚ್ಚರಿಸುತ್ತಲೇ ಇರುತ್ತದೆ.
ಜಗತ್ತಿನ ವೇದಿಕೆಯ
ಮೇಲೆ ನರೇಂದ್ರನಾಥರು:
ಶ್ರೀ ರಾಮಕೃಷ್ಣರಿಂದ
ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆದ ನರೇಂದ್ರರು ಅಸಾಧ್ಯವಾದ ಆಧ್ಯಾತ್ಮಿಕ ಕಿಚ್ಚು ಮತ್ತು ತೀವ್ರ
ರೀತಿಯ ಅನುಷ್ಠಾನಗಳನ್ನು ಹೊಂದಿದರು, ರಾಮಕೃಷ್ಣರ ಶಿಷ್ಯವೃಂದದ ನೇತೃತ್ವವನ್ನು ವಹಿಸಿದ್ದ ಸಮಯದಲ್ಲಿ
ಆಧ್ಯಾತ್ಮಿಕ ಅನುಷ್ಠಾನದ ಪರಾಕಾಷ್ಠೆಯಾದ ನಿರ್ವಿಕಲ್ಪ ಸಮಾಧಿಯನ್ನು ಅನುಗ್ರಹಿಸಬೇಕೆಂದು ಗುರುಗಳಲ್ಲಿ
ಕೇಳಿಕೊಂಡರು.
ಆಗ ರಾಮಕೃಷ್ಣರು
ಹೀಗೆಂದರಂತೆ,” ಕಷ್ಟಕೋಟಲೆಯಿಂದ ಸಂಸಾರಸಾಗರದಲ್ಲಿ ಬೇಯುತ್ತಿರುವ ಜನರಿಗೆ ಶಾಂತಿ ಕೊಡುವೆಯೆಂದು ನಾನು
ತಿಳಿದಿದ್ದೆ, ಆದರೆ ನೀನು ನಿನ್ನ ಸ್ವಮುಕ್ತಿಗಾಗಿ ಬೇಡುತ್ತಿರುವೆಯೆಲ್ಲಾ, ನಾಚಿಕೆಯಾಗುವುದಿಲ್ಲವೇ?”
ಎಂದರಂತೆ. ನಿರ್ವಿಕಲ್ಪ ಸಮಾಧಿಯ ಕೀಲಿಕೈ ತಮ್ಮಲ್ಲಿಯೇ
ಇರುವುದೆಂದೂ ಸೂಕ್ತ ಸಮಯದಲ್ಲಿ ಅದನ್ನು ತೆಗೆಯಲಾಗುವುದು
ಎಂದು ಹೇಳಿದರಂತೆ. ಯಾವ ಕಾರ್ಯಕ್ಕಾಗಿ ನರೇಂದ್ರನು ಜನ್ಮವೆತ್ತಿದ್ದಾನೋ ಆ ಕಾರ್ಯವನ್ನು ಪೂರ್ಣಗೊಳಿಸುವವರೆಗೆ
ನಿರ್ವಿಕಲ್ಪ ಸಮಾಧಿಯ ಮಾರ್ಗವನ್ನು ತೋರಿಸುವುದಿಲ್ಲ ಎಂದು ರಾಮಕೃಷ್ಣರು ಹೇಳಿದಾಗ, ನರೇಂದ್ರರಿಗೆ
ವಾಸ್ತವದ ಅರಿವಾಯಿತಂತೆ.
ಶ್ರೀರಾಮಕೃಷ್ಣರು
ಸಮಾಧಿಸ್ಥರಾಗುವ ಮೂರು-ನಾಲ್ಕು ದಿನಗಳ ಮಂಚೆ ನರೇಂದ್ರರನ್ನು
ಕರೆದು ತಮ್ಮ ಶಕ್ತಿಯನ್ನೆಲ್ಲಾ ಧಾರೆ ಎರೆದು “ ನಾನು ಧಾರೆ ಎರೆದ ಶಕ್ತಿಯ ಫಲವು, ನಿನ್ನಿಂದ ಅನೇಕ
ಮಹತ್ತರ ಕಾರ್ಯಗಳನ್ನು ಮಾಡಿಸುವುದು, ಅನಂತರವೇ, ನೀನು ನಿನ್ನ ಜಾಗಕ್ಕೆ ಮರಳುವೇ” ಎಂದು ತಿಳಿಸಿದರಂತೆ.
ಗುರುವು ಮನಸ್ಸು
ಮಾಡಿದರೇ, ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇದೇ ಸಾಕ್ಷಿ. ಸ್ವಸಾಧನೆಗೆಂದು ಪರಿತಪಿಸುತ್ತಿದ್ದ
ಅವನ ಪ್ರಚಂಡ ಶಕ್ತಿಯನ್ನು, ಲೋಕೋದ್ಧಾರಕ್ಕಾಗಿ ಮೀಸಲು ಮಾಡಿದರು. ತನ್ನ ಶಿಷ್ಯನ ಮನಸ್ಸಿನ ಹೊಯ್ದಾಟವನ್ನು ಗುರುತಿಸಿ, ಅದಕ್ಕೆ
ಸರಿಯಾದ ಮಾರ್ಗವನ್ನು ತೋರಿಸುವುದು ಮತ್ತು ಹಾದಿಯುದ್ದಕ್ಕೂ
ಬೆಳಕನ್ನು ಚೆಲ್ಲುವುದು ಒಬ್ಬ ಗುರುವಿನಿಂದ ಮಾತ್ರ ಸಾಧ್ಯ ಎಂಬುದನ್ನು ಈ ಇಬ್ಬರು ಗುರು-ಶಿಷ್ಯರ ಸಂಬಂಧವು
ತೋರುತ್ತದೆ.
೧೮೮೬ ರಲ್ಲಿ ಶ್ರೀರಾಮಕೃಷ್ಣರ
ಮಹಾ ಸಮಾಧಿಯ ನಂತರ, ನರೇಂದ್ರನಾಥರು ಸೋದರ ಶಿಷ್ಯರೊಂದಿಗೆ ಸೇರಿ, ಕಠಿಣ ತಪಸ್ಸು ಮತ್ತು ಆಧ್ಯಾತ್ಮಿಕ ಅನುಷ್ಠಾನಗಳೊಂದಿಗೆ
ಶಿಷ್ಯರ ಮಹಾಸಂಘವನ್ನು ಆರಂಭಿಸಿದರು.
೧೮೯೦ರಲ್ಲಿ ಪರಿವ್ರಾಜಕ
ಸನ್ಯಾಸಿಯಾಗಿ ಎಲ್ಲ ಸಂಬಂಧಗಳನ್ನು ತೊರೆದು, ಮಾತೆ ಶಾರದಾದೇವಿಯವರ ಆಶಿರ್ವಾದ ಪಡೆದು, ಭಾರತದ ಉದ್ದಗಲಕ್ಕೂ
ಪಾದಯಾತ್ರೆ ಆರಂಭಿಸಿದರು. ಈ ಪರ್ಯಟನೆಯಲ್ಲಿ ಅನೇಕ ಪವಿತ್ರ ಯಾತ್ರಾ ಸ್ಥಳಗಳಿಗೆ ಬೇಟಿ ನೀಡಿದರು.
ಬೇಟಿ ನೀಡಿದ ಪ್ರತಿಯೊಂದು ಪ್ರದೇಶವು ಅವರ ಊಹೆಯನ್ನು ಮೀರಿ ಅದರ ಆಧ್ಯಾತ್ಮಿಕತೆಯ ದರ್ಶನ ನೀಡಿತ್ತು
ಸ್ವಾಮಿ ವಿವೇಕಾನಂದರಿಗೆ.
ಪ್ರಾಚೀನ ಭಾರತದ
ಸಾಂಸ್ಕ್ರತಿಕ, ರಾಜಕೀಯ ಮತ್ತು ಆಧ್ಯಾತ್ಮಿಕದ ವೈಭವದ ಜೀವಂತ ಚಿತ್ರವು ಅವರ ಕಣ್ಮುಂದೆ ಗೋಚರಿಸಿತು.
ಇಂತಹ ಭವ್ಯ ಪ;ರಂಪರೆಯ ಭಾರತೀಯ ಜನರ ದಟ್ಟ ದಾರಿದ್ರ್ಯವು ವಿವೇಕಾನಂದರ ಮನಸ್ಸಿನಲ್ಲಿ ಸ್ಪಷ್ಟವಾಗಿ
ಮೂಡಿತು. ಶ್ರೀ ಸಾಮಾನ್ಯನ ದಾರಿದ್ರ್ಯತೆ ಮತ್ತು ದಯನೀಯ ಸ್ಥಿತಿಗೆ ಮರುಗಿದರು. ಅಲ್ಲದೆ ಈ ಜನಸಮುದಾಯದ
ದುಸ್ಥಿತಿಯನ್ನು ಸುಧಾರಿಸುವ ಹಾದಿಯನ್ನು ಅನ್ವೇಷಿಸಲು ಮುಂದಾದರು.
ಭಾರತದ ಪ್ರವಾಸದ
ಕೊನೆಯ ಕುರುಹಾಗಿ ಕನ್ಯಾಕುಮಾರಿ ಮಾತೆಯ ವಿಗ್ರಹಕ್ಕೆ ಸಾಷ್ಟಾಂಗ ಪ್ರಮಾಣ ಮಾಡಿ, ಈಜುತ್ತಾ ಹೋಗಿ ಸಮುದ್ರದ ದಕ್ಷಿಣ ಬಂಡೆಯೊಂದರ ಮೇಲೆ ಕುಳಿತು ಇಡೀ ರಾತ್ರಿ
ಧ್ಯಾನಸ್ಥರಾದರು. ಪ್ರವಾಸದಲ್ಲಿ ನೋಡಿದ್ದ, ಕಂಡಿದ್ದ ಅನುಭವಗಳು ಸುರುಳಿಯಾಕಾರದ ದೃಶ್ಯಗಳಾಗಿ ಮನದ
ಕಣ್ಮಂದೆ ಸುಳಿದವು. ಭಾರತದ ಆಗಿನ ಅವನತಿಗೆ ಕಾರಣಗಳನ್ನು ಗುರುತಿಸಿ, ಇಲ್ಲಿ ಪುನರುಜ್ಜೀವನದ ಉಪಾಯಗಳನ್ನು ಕಂಡುಕೊಂಡರು.
ಪಾಶ್ಚಾತ್ಯ ರಾಷ್ಟ್ರಗಳಿಗೆ
ಹೋಗಿ ಭಾರತದ ದಾರಿದ್ರ್ಯ ನಿರ್ಮೂಲನಕ್ಕೆ ಸಹಾಯವನ್ನು ಕೋರಬೇಕೆಂದು ನಿಶ್ಚಯಿಸಿಕೊಂಡರು.
ಇದರ ಫಲವೇ ೧೮೯೩
ರ ಸೆಪ್ಟಂಬರ್ ೧೧ ರಂದು ಚಿಕಾಗೋದಲ್ಲಿ ನಡೆದ ವಿಶ್ವ
ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು. “ ಅಮೇರಿಕದ
ಸೋದರ ಸೋದರಿಯರೇ!” ಎಂದು ಸಭೆಯನ್ನು ಸಂಭೋದಿಸಿದ ನಂತರದಲ್ಲಿ ಅಭಿನಂದನೆಯ ಮಹಾಪೂರವೇ ಹರಿದಿತ್ತು.
ಈ ವಿಷಯವನ್ನು
ನಾನು ಮೊದಲ ಬಾರಿಗೆ ಓದಿದ್ದು ಮತ್ತು ಕೇಳಿದ್ದು ಇಂಗ್ಲೀಷ್ ನಲ್ಲಿದ್ದ ಆ ಪಾಠದಲ್ಲಿಯೇ ಮತ್ತು ನನ್ನನ್ನು
ಅತಿ ಹೆಚ್ಚು ವಿಸ್ಮಯಗೊಳಿಸಿದ್ದು ಸಹ ಉಂಟು, ಇದರಿಂದಲೇ ನನ್ನ ಮನಸ್ಸಿನಲ್ಲಿ ಎಷ್ಟೋ ಬಾರಿ ಅಂದುಕೊಂಡಿದ್ದೇನೆ,
ಮಂದೆ ನಾನು ಒಂದು ದಿನ ಕನ್ಯಾಕುಮಾರಿಯ ಆ ಬಂಡೆಯ ಮೇಲೆ ಕುಳಿತು ತಪಸ್ಸು ಮಾಡಬೇಕು ಎಂದು.! ವಿಪರ್ಯಾಸವೇನೆಂದರೆ ನಾನು ಇಂದಿಗೂ ಅಲ್ಲಿಗೆ ಬೇಟಿ ನೀಡಲಾಗಿಲ್ಲ.
ಮನಸ್ಸಿನ ಶಕ್ತಿ
ಪ್ರಸ್ತುತ ಅಂದರೆ
ಈ ನಾಲ್ಕೈದು ವರ್ಷಗಳಿಂದ ಇತ್ತೀಚೆಗೆ ಪ್ರಚಲಿತವಾಗುತ್ತಿರುವ ʼಮ್ಯಾನಿಫೆಸ್ಟೇಷನ್ʼ ಎಂಬ ಪದವನ್ನು
ಮತ್ತು ಅದರ ಅನುಷ್ಠನಾವನ್ನು ನೀವು ಕೇಳಿರುತ್ತೀರಿ. ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಸಂಬಂಧಿಸಿದ
ಒಂದಷ್ಟು ಯೂಟ್ಯೂಬ್ ವಿಡಿಯೋಗಳನ್ನು ಮತ್ತು ಪಾಡ್ ಕಾಸ್ಟ್ ಗಳನ್ನು
ನೋಡಿರುತ್ತೀರಿ. ಇದರ ಬಗ್ಗೆ ಮಾಹಿತಿಯನ್ನು ಸ್ವಾಮಿ ವಿವೆಕಾನಂದರು ಆಗಲೇ ವಿವರಿಸಿದ್ದರು.
“ಯಾವುದಾದರೂ ಒಂದು
ಭಾವನೆಯನ್ನು ತೆಗೆದುಕೊಳ್ಲಿ, ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದರ ಕುರಿತೆ ನಿಮ್ಮ ಆಲೋಚನೆಗಳಿರಲಿ,
ಅದರ ಬಗ್ಗೆಯೇ ಕನಸು ಕಾಣಿ, ಆ ಒಂದು ಭಾವನೆಗಾಗಿ ನಿಮ್ಮ ಜೀವನವನ್ನೆಲ್ಲಾ ಸವೆಸಿ, ನಿಮ್ಮ ದೇಹದ ಮಾಂಸಖಂಡಗಳು,
ನರಗಳು ಪ್ರತಿಯೊಂದು ಭಾಗಗಳೂ ಅದೇ ಭಾವನೆಯಿಂದ ತುಂಬಿ ತುಳುಕಲಿ, ಉಳಿದ ಆಲೋಚನೆಗಳನ್ನು ಅವುಗಳ ಪಾಡಿಗೆ
ಬಿಟ್ಟು ಬಿಡಿ, ಜಯ ಪಡೆಯುವುದಕ್ಕೆ ಇದೊಂದೆ ದಾರಿ”
ಈ ರಾಷ್ಟ್ರ ಜಾಗೃತಿಯ
ಪುಸ್ತಕವನ್ನು ಓದುವ ಸಮಯದಲ್ಲಿಯೇ ನಾನು ಮನಸ್ಸಿನ
ಅಚಲ ಶಕ್ತಿಯ ಕುರಿತು ತಿಳಿದಿದ್ದು.
ಇದೇ ಮ್ಯಾನಿಫೆಸ್ಟೇಷನ್
ಎಂದು ತಿಳಿಯದಿದ್ದರೂ ಮನಸ್ಸಿನ ಅಚಲ ಶಕ್ತಿಯನ್ನು ನಂಬಿ ಶಾಲಾ ದಿನಗಳಲ್ಲಿ ಅನೇಕ ಕಾಂಪಿಟೇಷನ್ ಗಳಲ್ಲಿ
ಭಾಗವಹಿಸಿ ಗೆದ್ದಿದ್ದೆನು.
ನಾವು ತುಂಬಾ ಸ್ವತಂತ್ರರು,
ಆದರೆ ನಮ್ಮ ಮನಸ್ಸನ್ನು ಕ್ಷಣಕಾಲ ನಿಗ್ರಹಿಸಲಾರೆವು!
ಎಲ್ಲವನ್ನು ತೊರೆದು ಒಂದು ವಿಷಯದ ಮೇಲೆ ಮನಸ್ಸನ್ನು ನಿಲ್ಲಿಸಲಾರೆವು. ಆದರೂ ನಮ್ಮನ್ನು ನಾವು
ಸ್ವತಂತ್ರರು ಎಂದುಕೊಳ್ಳುತ್ತೇವೆ. …..ಆಲೋಚಿಸಿ ನೋಡಿ, ನಿಗ್ರಹಕ್ಕೆ ಒಳಗಾದ ಮನಸ್ಸು ನಮ್ಮನ್ನು ಎಂದಿಗೂ
ಅದಃಪತನಕ್ಕೆ ಎಳೆಯುವುದಿಲ್ಲ, ನಮ್ಮನ್ನು ಹಿಂಸಿಸುವುದಿಲ್ಲ, ಮನಸ್ಸನ್ನು ಒಳ್ಳೆಯ ದಾರಿಗೆ ತಿರುಗಿಸಿ
ಉದ್ಧಾರ ಮಾಡುವುದು. ಆದರೆ ನಿಗ್ರಹಕ್ಕೆ ಒಳಗಾಗದ ಮನಸ್ಸು ಬೇರೊಂದು ಕೆಟ್ಟ ದಾರಿಗೆ ತಿರುಗಿಸಿ, ನಮ್ಮನ್ನೇ
ನಾಶ ಮಾಡುವುದು.
ಕಟ್ಟುನಿಟ್ಟಾದ
ಬ್ರಹ್ಮಚರ್ಯದ ಅಭ್ಯಾಸದಿಂದ, ಯಾವುದೇ ವಿದ್ಯೆಯ ಕಲಿಕೆಯು ಅಲ್ಪಕಾಲದಲ್ಲೇ ಕರತಲಾಮಲಕವಾಗುವುದು. ಇದನ್ನು
ನೀವು ಗಮನಿಸಿದ್ದೀರಾ????
ಒಂದು ಬಾರಿ ಮಾತ್ರವೇ
ಓದಿದ್ದನ್ನು ಅಥವಾ ಕೇಳಿದ್ದನ್ನು ಮರೆಯದೇ ಇರುವಂತಹ ಜ್ಞಾಪಕಶಕ್ತಿ ಬ್ರಹ್ಮಚರ್ಯದಿಂದಲೇ ಬರುವುದು. ನಮ್ಮ ದೇಶದಲ್ಲಿ ಬ್ರಹ್ಮಚರ್ಯದ ಅಭಾವದಿಂದ ಎಲ್ಲವೂ
ವಿನಾಶದ ಅಂಚಿನಲ್ಲಿದೆ.
ಇದರ ಮುಂದುವರಿದ ಭಾಗವನ್ನು ನಾಳಿನ ಮುಂದಿನ ಸಂಚಿಕೆಯಲ್ಲಿ ನೋಡೋಣ.
ನನ್ನ ಮತ್ತೊಂದು ಲೇಖನವನ್ನು ಓದಿ 👉[ https://capturingdaysoflife.blogspot.com/2025/07/24-international-self-care-day.html]
ಧನ್ಯವಾದಗಳು………🌷🌷🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್ಗಳು